ಯಕ್ಷದೇಗುಲ ತಂಡದ “ಕೌಸಲ್ಯಾ ವಿವಾಹ” ಹೊಸ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ
ಲೇಖಕರು : ಕೋಟ ಸುದರ್ಶನ ಉರಾಳ
ಗುರುವಾರ, ಮೇ 12 , 2016
|
ಮೇ 10 , 2016
|
ಯಕ್ಷದೇಗುಲ ತಂಡದ “ಕೌಸಲ್ಯಾ ವಿವಾಹ” ಹೊಸ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ
ಕೆಂಜೂರು :
“ಪೌರಾಣಿಕ ಪ್ರಸಂಗಗಳು ಭಾರತೀಯ ಸಂಸ್ಕೃತಿ ಸಂಪ್ರದಾಯಗಳು, ಆಚಾರ-ವಿಚಾರಗಳು, ವಿದ್ಯಾಭ್ಯಾಸ, ಶಾಸ್ತ್ರಾಭ್ಯಾಸ ಮುಂತಾದವುಗಳಿಗೆ ಸಂಬಂಧಿಸಿದವುಗಳಾಗಿರುವುದರಿಂದ ಜನಗಳಲ್ಲಿ ಸಚ್ಚಾರಿತ್ರ್ಯ, ನೈತಿಕ-ಮೌಲ್ಯಗಳು, ಸರಳಜೀವನ, ಸದ್ಗುಣಗಳಂಥ ಆದರ್ಶಗಳನ್ನು ಬೆಳೆಸುವುದೇ ಗುರಿಯಾಗಿದೆ ಹೀಗಾಗಿ ವೈಚಾರಿಕತೆ ಜನರ ಮನರಂಜನೆಗೆ ಪೂರಕ ಉದ್ದೇಶಗಳಾಗಿವೆ. ಈ ನಿಟ್ಟಿನಲ್ಲಿ ಸದಾ ಬೆಂಗಳೂರಿನ ಯಕ್ಷದೇಗುಲ ತಂಡವು ಒಂದಲ್ಲಾವೊಂದು ಚಟುವಟಿಕೆಯಿಂದಿರುವ ಪ್ರತಿವರ್ಷವು ಹಲವು ಪೌರಾಣಿಕ ಹೊಸ ಪ್ರಸಂಗವನ್ನೂ ಜನರಿಗೆ ನೀಡುತ್ತಿದೆ. ಅಲ್ಲದೇ ಶಾಲಾ, ಕಾಲೇಜುಗಳಲ್ಲಿ ಯಕ್ಷಗಾನದ ಪ್ರಾತ್ಯಕ್ಷಿತೆ ನಡೆಸುವ ಮೂಲಕ ಮಕ್ಕಳಲ್ಲಿ ಆಸಕ್ತಿ ತೋರಿಸುವಲ್ಲಿ ಯಕ್ಷದೇಗುಲ ತಂಡದ ಸಾಧನೆ ಮೆಚ್ಚುವಂತಿದೆ. ಇಂದು ಪ್ರದರ್ಶನಗೊಳ್ಳುವ ``ಕೌಸಲ್ಯಾ ವಿವಾಹ`` ಪ್ರಸಂಗ ಹಲವು ಪ್ರದರ್ಶನ ಕಂಡು ಯಶಸ್ವಿಯಾಗಲಿ” ಎಂದು 08-05-2016ರಂದು ಕೋಟ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನದ ರಥೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿವರ್ಷ ನೂತನ ಪೌರಾಣಿಕ ಪ್ರಸಂಗ ಪ್ರದರ್ಶನ ನಡೆಸುವ ಬೆಂಗಳೂರಿನ ಯಕ್ಷದೇಗುಲ ತಂಡದವರು ಪ್ರಸ್ತುತ ವರ್ಷ ಮಹಾಬಲೇಶ್ವರ ಬರವಣಿ ವಿರಚಿತ “ಕೌಸಲ್ಯಾ ವಿವಾಹ” ಯಕ್ಷಗಾನ ಪ್ರದರ್ಶನದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಚಾಲನೆ ನೀಡಿ ಮಾತನಾಡಿದರು. ಹಾಗೆ ವೇದಿಕೆಯಲ್ಲಿ ಹಂದೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅಮರ ಹಂದೆ ಮತ್ತು ಹಂದಟ್ಟು ಅಭಿಮಾನ್ ಫ್ರೆಂಡ್ಸ್ನ ಸದಸ್ಯರಾದ ಮಂಜುನಾಥ ಉರಾಳರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನರಸಿಂಹ ತುಂಗ ನಿರೂಪಿಸಿದರು.
ನಂತರ ಕೆ.ಮೋಹನ್ ನಿರ್ದೇಶನದಲ್ಲಿ ನಡೆದ “ಕೌಸಲ್ಯಾ ವಿವಾಹ” ಯಕ್ಷಗಾನದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ದೇವರಾಜ್ ದಾಸ್, ಮದ್ದಲೆಯಲ್ಲಿ ಗಣಪತಿ ಭಟ್, ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ಶಿವಾನಂದ ಕೋಟ, ಮಾಧವ ಮಣೂರು ಮತ್ತು ಬಾಲ ಕಲಾವಿದರಾಗಿ ಸುದೀಪ ಉರಾಳ ಹಾಗೂ ವಾಗ್ವೀಲಾಸ ಭಾಗವಹಿಸಿದರು. ಮುಮ್ಮೇಳದಲ್ಲಿ ಭಾನುಮಂತನಾಗಿ ಗಣೇಶ ಉಪ್ಪುಂದ, ಮಂತ್ರಿಯಾಗಿ ರಾಘವೇಂದ್ರ ತುಂಗ, ದಶರಥನಾಗಿ ಸುಜಯೀಂದ್ರ ಹಂದೆ, ಬ್ರಹ್ಮನಾಗಿ ಮನೋಜ್ ಭಟ್, ರಾವಣನಾಗಿ ತಮ್ಮಣ್ಣ ಗಾಂವ್ಕರ್. ಕೌಸಲ್ಯೆಯಾಗಿ ಕಡ್ಲೆ ಗಣಪತಿ ಹೆಗಡೆ, ಸಖಿಯರಾಗಿ ಕಿರಾಡಿ ವಿಶ್ವನಾಥ ಹಾಗೂ ಶ್ರೀಕಾಂತ ಭಾಗವಹಿಸಿದರು. ಸಂಯೋಜನೆಯನ್ನು ಯಕ್ಷದೇಗುಲದ ಸುದರ್ಶನ ಉರಾಳರು ಮಾಡಿದರು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಉತ್ತರಹಳ್ಳಿಯ RNSIT ಇಂಜಿನಿಯರಿಂಗ್ ಕಾಲೇಜ್ ಹತ್ತಿರವಿರುವ “ಅತ್ರಿ ವೆಜ್ ರೆಸ್ಟೋರೆಂಟ್”ರವರು ಸಹಕಾರ ನೀಡಿದರು.
|
|
|